ಗುರುವಾರ, ಆಗಸ್ಟ್ 14, 2014

ಮಾಸ್ತಿಯಾದ ಮಹಾಸತಿ ದೇಕಬ್ಬೆ

(ಲೇಖಕರು: ಡಾ|| ಎಚ್.ಎಸ್.ಗೋಪಾಲ ರಾವ್)
ಇತ್ತೀಚಿನ ದಿನಗಳಲ್ಲಿ ಪ್ರಾಚೀನವಾದ ಎಷ್ಟೋ ಆಚರಣೆಗಳು ಅರ್ಥ ಕಳೆದುಕ್ಕೊಳ್ಳುತ್ತಿವೆ. ಇದು ಅನಿವಾರ್ಯವಷ್ಟೇ ಅಲ್ಲದೆ ಗತ್ಯವೂ ಹೌದು ಎಂಬ ಬಗ್ಗೆ ಎರಡು ಮಾತಿಲ್ಲ. ಹಿಂದಿನ ಕಾಲದ ಎಲ್ಲಾ ಆಚರಣೆಗಳೂ ಅರ್ಥಪೂರ್ಣ ಎಂದೇನೂ ಭಾವಿಸಬೇಕಿಲ್ಲ. ಆ ಕಾಲಕ್ಕೆ ಕೆಲವು ಆಚರಣೆಗಳು ಮಹತ್ವ ಪಡೆದಿದ್ದವು ಅಥವಾ ಅರ್ಥ ಪಡೆದಿದ್ದವು. ಈ ಅಭಿಪ್ರಾಯವೂ ಸಹ ಸರ್ವಸಮ್ಮತವಲ್ಲ. ಯಾವುದೇ ಕಾಲದ ಯಾವುದೇ ಆಚರಣೆಯು ಸಮಾಜದ ಎಲ್ಲರ ಅನುಮತಿ ಪಡೆದಿರುವುದಿಲ್ಲ ಮತ್ತು ಅದು ಎಲ್ಲರಿಗೂ ಪ್ರಿಯವಾಗಿರಬೇಕು ಎಂದು ನಿರೀಕ್ಷಿಸುವುದೂ  ಸರಿಯಲ್ಲ.
ಭಾರತದಲ್ಲಿ ಸ್ತ್ರೀಯರಿಗೆ ಗೌರವ ಹೆಚ್ಚು. ಅವಳನ್ನು ದೇವತೆಗೆ ಸಮೀಕರಿಸುವುದು ಮೊದಲಿನಿಂದ ಬಂದ ಪದ್ಧತಿ. ಭಾರತೀಯ ಸಮಾಜದಲ್ಲಿ ಮಾತೃದೇವತೆಗೆ ಮಹತ್ವದ ಸ್ಥಾನವಿದೆ. ಯತ್ರನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂಬ ಪ್ರಸಿದ್ಧ ಹೇಳಿಕೆ ಇದೆ. ಇಂತಹ ಹೇಳಿಕೆಗಳನ್ನು ಗುಮಾನಿಯಿಂದ ನೋಡುವ ಸ್ವಾತಂತ್ರ್ಯವೂ ನಮಗಿದೆ. ಹೆಣ್ಣನ್ನು ಕೇವಲ ಕಾಮುಕ ದೃಷ್ಟಿಯಿಂದ ನೋಡದೆ ಗೌರವದಿಂದ ಕಂಡ ಉದಾಹರಣೆಗಳೂ ಇವೆ. ರಾಷ್ಟ್ರಕೂಟ ದೊರೆ ಮೂರನೆಯ ಕೃಷ್ಣನು ಶುಚಿತ್ವಕ್ಕೆ ಹೆಸರಾದವನು. ಮಧ್ಯಪ್ರದೇಶದ ಜುರ ಎಂಬ ಸಣ್ಣ ಹಳ್ಳಿಯಲ್ಲಿ ದೊರೆತಿರುವ ಒಂದು ಕನ್ನಡ ಶಾಸನವು ಅವನನ್ನು ಪರಾಂಗನಾ ಪುತ್ರಕ ಎಂದು ಹೊಗಳಿದೆ; ಅಲ್ಲದೆ ಪರಸ್ತ್ರೀಯರನ್ನು ನೋಡಿದಾಗ ಆವನಿಗೆ ಬಸಿರೊಳಗಿಳ್ದು ಆಡಿದ ನೆನಪಾಗುತ್ತಿತ್ತಂತೆ. ಹೀಗೆ ಹೆಣ್ಣುಗಳನ್ನು ಗೌರವದಿಂದ ಕಂಡ ಸಮಾಜವೇ, ಅವರನ್ನು ತೊತ್ತಿನ ಸೂಳೆಯರನ್ನಾಗಿಯೂ ಮಾಡಿದೆ. ಸಾಮಾನ್ಯವಾಗಿ ಹೆಣ್ಣು ಎಂದ ತಕ್ಷಣ ಆಕೆಯನ್ನು ಭೋಗದ ವಸ್ತುವಾಗಿ ಕಲ್ಪಿಸಿಕೊಳ್ಳುವ ಕ್ಷುಲ್ಲಕ ಮನೋಭಾವ  ಕೆಲವು ಜನರಿಗಾದರೂ ಇದೆ. ಆದರೆ ಅವಳನ್ನು ತಾಯಿ, ಅಕ್ಕ ಮತ್ತು ತಂಗಿಯಾಗಿಯೂ ಪ್ರೀತಿ ಮತ್ತು ಗೌರವದಿಂದ ಕಂಡು ರಕ್ಷಿಸುವ ಮನೋಭಾವವೂ ಅನೇಕರಿಗೆ ಇದೆ ಎನ್ನವುದನ್ನು ಅಲ್ಲಗಳೆಯಲು ಆಗುವುದಿಲ್ಲ.
ಹೆಣ್ಣಿಗೆ ಶೀಲವು ಬಹಳ ಮುಖ್ಯ ಮತ್ತು ಪವಿತ್ರ ಎಂದು ತಿಳಿಯಲಾಗಿದೆ. ಈ ಬಗ್ಗೆ ಯಾವುದೇ ಪ್ರತ್ಯೇಕ ವ್ಯಾಖ್ಯಾನವು ಅವಶ್ಯಕವಿಲ್ಲ ಎಂದು ಭಾವಿಸಲಾಗಿದೆ. ಹೆಣ್ಣು ತನ್ನ ಶೀಲವನ್ನು ರಕ್ಷಿಸಿಕೊಳ್ಳಲು ಆದ್ಯತೆ ನೀಡುತ್ತಾಳೆ ಮತ್ತು ಆ ನಿಟ್ಟಿನಲ್ಲಿ ಪುರುಷನ ನೆರವೂ ಇರುತ್ತದೆ. ಸ್ತ್ರೀಯರ ಮಾನರಕ್ಷಣೆಯಲ್ಲಿ ಪುರುಷ ವಹಿಸಿರುವ ಪಾತ್ರವನ್ನು ಕುರಿತಂತೆ ಪೆಣ್ಬುಯ್ಯಲ್ ಪ್ರಸಂಗಗಳು ದಾಖಲಿಸಿವೆ.
ಹೆಣ್ಣು ತನ್ನ ಶೀಲರಕ್ಷಣೆಯ ವಿಚಾರದಲ್ಲಿ ಅನುಸರಿಸಿದ ಒಂದು ಮುಂಜಾಗರೂಕತಾ ಕ್ರಮವೇ ಸತಿ ಹೋಗುವುದು. ತನ್ನ ಪತಿಯ ಸಾವಿನೊಡನೆ ತನ್ನ ಸಾವನ್ನೂ ಕಂಡುಕೊಳ್ಳುವ ಪದ್ಧತಿಯು ಯಾವುದೇ ನಾಗರಿಕ ಸಮಾಜಕ್ಕೂ ಗೌರವ ತರುವಂತಹುದಲ್ಲ ಎಂಬುದನ್ನು ವಿಚಾರವಂತರಾದ ಎಲ್ಲರೂ ಒಪ್ಪುತ್ತಾರೆ. ವಿಧವೆಯಾದ, ಬದುಕನ್ನು ಇನ್ನೂ ಸರಿಯಾಗಿ ತಿಳಿಯದ ಹೆಣ್ಣನ್ನು ವಿರೂಪಗೊಳಿಸುವ ಕ್ರೌರ್ಯವನ್ನು ಯಾವುದೇ ಉದಾತ್ತ ನಾಗರಿಕ ಸಮಾಜವೂ ಸಮರ್ಥಿಸಲು ಸಾಧ್ಯವಿಲ್ಲ. ಆದರೆ ಇದು ನಮ್ಮ ಸಮಾಜದಲ್ಲಿ ಬಹು ದೀರ್ಘ ಕಾಲ ಇದ್ದ ಒಂದು ದುಷ್ಟ ಸಂಪ್ರದಾಯ ಎನ್ನುವ ಅಭಿಪ್ರಾಯಕ್ಕೆ ಹೆಚ್ಚು ವಿರೋಧ ಇರಲಾರದು. ಗಂಡನ ಸಾವಿನ ನಂತರ ಹೆಣ್ಣಾದವಳು ಜೀವನದಲ್ಲಿ ಎದುರಿಸಬೇಕಾದ ಅನೇಕ ತೊಂದರೆಗಳಿಂದ ಬಿಡುಗಡೆ ಪಡೆಯಲು ಹಾಗೂ ಶೀಲ ರಕ್ಷಣೆ ಮಾಡಿಕೊಳ್ಳಲು ಸತಿ ಹೋಗಲು ನಿರ್ಧರಿಸುತ್ತಿದ್ದಂತೆ ತೋರುತ್ತದೆ. ಸತಿ ಹೋಗುವುದು ಎಂದರೆ ಸತಿಯಾದವಳು ಗಂಡನ ಸಾವಿನ ನಂತರ ಅವನ ಜೊತೆಗೆ (ಸಹಗಮನ) ಆಥವಾ ಅವನನ್ನು ಅನುಸರಿಸಿ (ಅನುಗಮನ) ಸಾವಿಗೆ ಅಣಿಯಾಗುವುದು. ಇದು ಕಡ್ಡಾಯವಾಗಿರಲಿಲ್ಲ ಎನ್ನುವುದನ್ನು ಲಕ್ಕುಂಡಿಯ ಪ್ರಸಿದ್ಧ ಅತ್ತಿಮಬ್ಬೆಯ ಶಾಸನ ಖಚಿತಪಡಿಸಿದೆ. ಅತ್ತಿಮಬ್ಬೆಯ ಗಂಡ ನಾಗದೇವ ಸತ್ತಾಗ ವನ ಕಿರಿಯ ಹೆಂಡತಿ, ಅತ್ತಿಮಬ್ಬೆಯ ತಂಗಿ ಗುಂಡಮಬ್ಬೆ ಮಾತ್ರ ಸತಿಹೋದಳು. ಮಗನಾದ ಅಣ್ಣಿಗದೇವನ ರಕ್ಷಣೆಗೆ ಅತ್ತಿಮಬ್ಬೆ ಉಳಿದಳು. ಚಿಕ್ಕ ವಯಸ್ಸಿನ ಹೆಣ್ಣು ಸತಿ ಹೋಗುವುದನ್ನು ತಪ್ಪಿಸಲು ಕುಟುಂಬದ ಮತ್ತು ಊರಿನ ಹಿರಿಯರು ಪ್ರಯತ್ನಿಸುತ್ತಿದ್ದ ಹಲವು ಉದಾಹರಣೆಗಳಿವೆ. ಆದರೆ ತಮ್ಮ ಗಂಡ ಸತ್ತಾಗ, ಸಾವಿನಲ್ಲೂ ಅವನನ್ನು ಹಿಂಬಾಲಿಸಲು ಭಾರತೀಯ ನಾರಿಯರು ಇಚ್ಛಿಸುತ್ತಿದ್ದರು ಎಂದು ತಿಳಿಯಲಾಗಿದೆ. ಇಂತಹ ಒಂದು ಉದಾಹರಣೆಯನ್ನು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಬೆಳತೂರು ಗ್ರಾಮದ ಒಂದು ಶಾಸನ ದಾಖಲಿಸಿದೆ.
ಇಂತಹ ಸತಿ ಪದ್ಧತಿಗೆ
­೧) ಸತ್ತವನ ಶವದ ಜೊತೆಗೆ ಅವನಿಗೆ ಪ್ರಿಯವಾದ ವಸ್ತುಗಳನ್ನು ಇಡುವುದು
೨) ಮುಂದಿನ ಜನ್ಮದಲ್ಲಿಯೂ ಗಂಡ-ಹೆಂಡಿರಾಗಿಯೇ ಇರುವುದು
೩) ಮರಣಾನಂತರ ಹೆಂಡತಿ ಬೇರೆಯವರ ಪಾಲಾಗದಿರುವುದು ಇತ್ಯಾದಿ ಕಾರಣಗಳು ಪ್ರೇರಣೆ ಎಂದು ತಿಳಿಯಲಾಗಿದೆ.
ಇಂತಹ ಪದ್ಧತಿಯು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿತ್ತು ಎಂದೇನೂ ಭಾವಿಸಬೇಕಾಗಿಲ್ಲ. ಭಾರತದಲ್ಲಿ ರಾಮಾಯಣ ಮತ್ತು ಮಹಾಭಾರತದ ಕಾಲದಲ್ಲೇ ಸತಿ ಪದ್ದತಿ ಇತ್ತು ಎನ್ನುವುದು ತಿಳಿದಿದೆ. ಪಾಂಡುವಿನ ಹೆಂಡತಿ ಮಾದ್ರಿ ಮತ್ತು ಕೃಷ್ಣನ ಹೆಂಡತಿಯರಲ್ಲಿ ಕೆಲವರು ತಮ್ಮ ಗಂಡಂದಿರ ಮರಣಾನಂತರ ಅಗ್ನಿಪ್ರವೇಶ ಮಾಡಿದರಂತೆ. ಉತ್ತರ ಭಾರತದಲ್ಲಿ ದಕ್ಷಿಣ ಭಾರತಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಸತಿ ಪದ್ದತಿ ಇತ್ತು ಎನ್ನುವುದು ತಿಳಿದಿದೆ. ಕ್ರಿ.ಶ.೧೦ನೆಯ ಶತಮಾನದ ವೇಳೆಗೆ ಕರ್ನಾಟಕದಲ್ಲಿ ಸತಿ ಪದ್ದತಿ ಇದ್ದ ಸುಳಿವುಗಳು ದೊರೆತಿವೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬೆನ್ನೂರಿನ ಒಂದು ಶಾಸನದ ಕಾಲ ಕ್ರಿ.ಶ.೯೭೨. ಸದ್ಯಕ್ಕೆ ದೊರೆತಿರುವ ಸತಿಪದ್ದತಿಯನ್ನು ಕುರಿತ ಮೊದಲ ಶಾಸನ ಇದು. ಬಿದಿಯಣ್ಣ ಸತ್ತಾಗ ಅವನ ಹೆಂಡತಿ ಜಕ್ಕರ್ಬೆ ಸತಿ ಹೋದದ್ದನ್ನು ಶಾಸನ ದಾಖಲಿಸಿದೆ. ಜಕ್ಕರ್ಬೆಯದು ಸಹಗಮನ. ಗಂಡನ ಸಾವಿನ ನಂತರ ಅಥವಾ ಸಾವಿನ ಸುದ್ದಿ ತಿಳಿದ ನಂತರ ಅಣಿಯಾಗಿ ಸಾಯುವುದು ಅನುಗಮನ. ಅಂತಹ ಅನುಗಮನದ ಒಂದು ದಾಖಲೆಯೇ ಪ್ರಸ್ತುತ ಪ್ರಸ್ತಾಪಿಸುತ್ತಿರುವ ಶಾಸನ.
ಬೆಳತೂರಿನ ಬಿನಕಲಮ್ಮನ ಗುಡಿಯ ಬಳಿ ಇರುವ ಶಾಸನವು ಚೋಳ ರಾಜ ರಾಜೇಂದ್ರದೇವನ ಆಳ್ವಿಕೆಯ ಆರನೆಯ ವರ್ಷ ಹಾಗೂ ಶಕವರ್ಷ ೯೭೯ನೆಯ ಹೇಮಳಂಬಿ ಸಂವತ್ಸರದ ಕಾರ್ತೀಕ ಮಾಸದ ಕೃಷ್ಣ ಪಕ್ಷ ದ್ವಾದಶಿ ಸೋಮವಾರದಂದು ದಾಖಲಿತವಾಗಿದೆ. ಕ್ರಿ.ಶ. ವರ್ಷಗಳಲ್ಲಿ ಉಕ್ತ ಕಾಲವು ೨೭-೧೦-೧೧೫೭ಕ್ಕೆ ಸರಿಹೊಂದುತ್ತದೆ. ಶಾಸನವು ದೇಕಬ್ಬೆ ಎಂಬ ಹೆಣ್ಣು ಸತಿ ಹೋದ ವಿಷಯವನ್ನು ವಿವರಿಸಿದೆ. ದೇಕಬ್ಬೆಯ ಗಂಡ ಏಚ. ಏಚನು ನವಲೆನಾಡ ಅಧಿಪತಿ. ಕುರುವನ್ದ ಕುಲಕ್ಕೆ ಸೇರಿದವನು. ವೀರನಾದ ಏಚನು ವಿನಯಚಿಂತಾಮಣಿ ಎನಿಸಿಕೊಂಡ ದೇಕಬ್ಬೆಯನ್ನು ಮದುವೆ ಆಗಿದ್ದ. ದೇಕಬ್ಬೆಯು ನುಗು ನಾಡ ಅಧಿಪ ರವಿಗನ ಮಗಳು. ಈ ವಂಶದವರು ಸಕಳ ಜಗಸ್ತುತರು, ವಚೋಗ್ರಗಣ್ಯರು, ಊರ್ಜಿತ ಪುಣ್ಯರು ಮತ್ತು ವಿಸ್ತಾರ ಚಾರುವೀರರು. ಇಂತಹ ವಂಶದಲ್ಲಿ ರವಿಗ ಹುಟ್ಟಿದ್ದ. ರವಿಗನ ಹುಟ್ಟಿನೊಡನೆ ಅರಿವು, ಅರವಿನೊಡನೆ ಆಯವೂ, ಆಯದೊಡನೆ ಚಾಗವೂ ಹುಟ್ಟಿದವು ಎಂದು ಶಾಸನ ಕವಿ ಹೊಗಳಿದ್ದಾನೆ. ರವಿಗ ಮತ್ತು ಪೊನ್ನಕ್ಕನ ಮಗಳು ದೇಕಬ್ಬೆ.
ಯಾವ ಕಾರಣಕ್ಕೋ ಏಚನು ತನ್ನ ದಾಯಾದಿಗಳೊಡನೆ ಹೋರಾಡಿ, ಅವರಲ್ಲೊಬ್ಬನನ್ನು ಕೊಂದನೆಂಬ ಕಾರಣದಿಂದ ಚೋಳನ ಕಡೆಯವರು ಅವನನ್ನು ಬಂಧಿಸಿ ತಲಕಾಡಿಗೆ ಕರೆದೊಯ್ದರು. ಏಚನ ಅಪರಾಧಕ್ಕೆ ಅಲ್ಲಿ ಮರಣದಂಡನೆಯನ್ನು ವಿಧಿಸಲಾಯಿತು. ಅವನ ಸಾವಿನ ಸುದ್ದಿ ತಿಳಿದ ತಕ್ಷಣ ದೇಕಬ್ಬೆಯು ಸತಿ ಹೋಗುವ ನಿರ್ಧಾರ ಮಾಡಿದಳು. ಈ ಪ್ರಸಂಗವನ್ನು ಶಾಸನ ಕವಿಯು ಒಂದೇ ಪದ್ಯದಲ್ಲಿ ವರದಿ ಮಾಡಿದ್ದಾನೆ. ಕಲಿಕಾಲವೇಳನೆನಿಸಿದ ಕಲಿಚಾಗಿಯನಿಱದು ಕೊನ್ದಱೆಂಬುದು ಮಾತಂ ಲಲಿತಾಂಗಿ ಕೇಳ್ದ ರವಿಗನ ಕುಲದೀಪಕಿ ಸಾಯಲೆನ್ದು ಕೊಣ್ಡಕೆ ನಡೆದಳ್. ಸಾಯುವ ನಿರ್ಧಾರ ದೇಕಬ್ಬೆಯದು. ಅದು ಬೇರೆಯವರ ಬಲವಂತದಿಂದ ತೆಗೆದುಕೊಂಡ ನಿರ್ಧಾರವಾಗಿರಲಿಲ್ಲ. ಬೇರೆಯವರು ಅವಳ ನಿರ್ಧಾರವನ್ನು ಒಪ್ಪದೆ ವಿರೋಧಿಸಿದರು. ತಂದೆ, ತಾಯಿ, ಬಂಧುಗಳೆಲ್ಲರೂ ಸಾಯುವುದು ಬೇಡ ಎಂದು ಬುದ್ದಿ ಹೇಳಿದರು. ಆದರೆ ದೇಕಬ್ಬೆಯ ನಿರ್ಧಾರವು ಅಚಲವಾಗಿತ್ತು. ನುಗುನಾಡಧಿಪತಿ ರವಿಗನ ಮಗಳಾಗಿಯುಮನ್ತೆ ನವಿಲೆನಾಡಧಿಪತಿಗಾಂ ನೆಗಳೆ ಸತಿಯಾಗಿ ಬಾಳ್ವುದು ಬಗೆದರ್ಪ್ಪೆನೆ ಕೊಟ್ಟ ಕೊಣ್ಡ ಮನೆಯೆಸಮಱಯಲ್ ಎಂದು ಎಲ್ಲರ ಮಾತನ್ನು ನಯದಿಂದ ತಳ್ಳಿಹಾಕಿ, ಭೂಮಿ, ಹೊನ್ನ ಉಡುಗೆ, ಗೋವು, ಧನ ಇತ್ಯಾದಿಗಳನ್ನು ದಾನ ಮಾಡುತ್ತಾ ದೇಕಬ್ಬೆ ಕೈಮುಗಿದು ಉರಿಯುತ್ತಿದ್ದ ಬೆಂಕಿಯನ್ನು ಪ್ರವೇಶಿಸಿದಳು.
ಹೀಗೆ ಶ್ರೀರಮಣಿಗೌರಿಸಚಿಧಾರಿಣಿಯಪುತ್ರಿರತಿ ಭೂರಮಣಿಯನ್ದದ ಸರೂಪವಾಱ ವೊಳ್ಪೌದಾರೆ ಜಯಧಾರೆ ಜಸಧಾರೆ ನಯಧಾರೆ ಭಯಹಾರೆ ಪತಿಭಕ್ತೆ ಧೃತಶಕ್ತೆ ದೇಕಬ್ಬೆ ಸತಿ ಹೋದಳು. ಇಂತಹ ನಾರೀರತ್ನಕ್ಕೆ ಸಮನಾರು ಎಂದು ಶಾಸನ ಕವಿ ಪ್ರಶ್ನಿಸಿದ್ದಾನೆ.
ಮಗಳ ನೆನಪಿಗಾಗಿ ರವಿಗನು ಮಾಸ್ತಿಕಲ್ಲನ್ನು ಹಾಕಿಸಿದ್ದಾನೆ. ಅನುಗಮನವನ್ನು ಕುರಿತ ಈ ಶಾಸನವು ದೇಕಬ್ಬೆಯ ಅಚಲ ನಿರ್ಧಾರವನ್ನು ತಿಳಿಸುತ್ತದೆ; ಜೊತೆಗೆ ಆ ಕಾಲಕ್ಕೆ ಸತಿ ಹೋಗುವ ಪದ್ದತಿಯು ಕಡ್ಡಾಯವೇನೂ ಆಗಿರಲಿಲ್ಲ ಎಂದು ಖಚಿತಪಡಿಸುತ್ತದೆ. ಸತಿ ಹೋಗುವುದು ಐಚ್ಛಿಕ ವಿಷಯವಾಗಿತ್ತು. ಸತಿ ಹೋಗುವುದನ್ನು ತಡೆಯುವ ಪ್ರಯತ್ನಗಳೂ ನಡೆಯುತ್ತಿದ್ದುದನ್ನು ಶಾಸನವು ಸ್ಪಷ್ಟಪಡಿಸಿದೆ.
ಕರ್ನಾಟಕದಲ್ಲಿ ಮಾಸ್ತಿಕಲ್ಲುಗಳು ವಿರಳವಲ್ಲ. ಒಕ್ಕೈ ಮಾಸ್ತಿಕಲ್ಲುಗಳಾಗಲೀ, ಸತಿಯ ಶಿಲ್ಪಸಹಿತ ಮಾಸ್ತಿಕಲ್ಲುಗಳಾಗಲೀ, ಶಾಸನಸಹಿತ ಮಾಸ್ತಿಕಲ್ಲುಗಳಾಗಲೀ ಶಾಸನರಹಿತ ಮಾಸ್ತಿಕಲ್ಲುಗಳಾಗಲೀ ನಾಡಿನ ಸಾಂಸ್ಕೃತಿಕ ಬದುಕಿನ ಅಧ್ಯಯನಕ್ಕೆ ಸಹಾಯ ಮಾಡುತ್ತವೆ.

ಶುಕ್ರವಾರ, ಆಗಸ್ಟ್ 23, 2013

ಹತ್ತನೆಯ ಶತಮಾನದ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಪರಿಸರದ ಪರಿಚಯದ ಜೊತೆಗೆ ಕವಿ ಪಂಪನ ಕಾಲ, ದೇಶದ ವಿವರ

೧೦ನೆಯ ಶತಮಾನ ದಕ್ಷಿಣ ಭಾರತದ ಇತಿಹಾಸದಲ್ಲಿ ರಾಷ್ಟ್ರಕೂಟರ ಪ್ರಾಬಲ್ಯದ ಕಾಲ. ೧೦ನೆಯ ಶತಮಾನದ ಆರಂಭದಲ್ಲಿ ರಾಷ್ಟ್ರಕೂಟರ ಮುಮ್ಮಡಿ ಕೃಷ್ಣ ಆಳ್ವಿಕೆ ನಡೆಸುತ್ತಿದ್ದನು. ರಾಷ್ಟ್ರಕೂಟರ ರಾಜಕೀಯ ಪ್ರಭಾವ ತನ್ನ ಪರಮಾವಧಿಗೆ ತಲುಪಿದ್ದು ಮುಮ್ಮಡಿ ಕೃಷ್ಣನ ಕಾಲದಲ್ಲಿ ಅಂದರೆ ಕ್ರಿ.ಶ. ಸು.೯೩೯-೯೬೭ರ ಅವಧಿಯಲ್ಲಿ. ಇದೇ ಪಂಪನ ಬದುಕು ಮತ್ತು ಕೃತಿರಚನೆಯ ಕಾಲವೂ ಆಗಿರುವುದು ವಿಶೇಷ.
ಈ ಹೊತ್ತಿಗೆ ರಾಷ್ಟ್ರಕೂಟರು ದಕ್ಷಿಣದಲ್ಲಿ ತಂಜಾವೂರಿನವರೆಗೂ ಹಾಗೂ ಉತ್ತರದಲ್ಲಿ ಬುಂದೇಲ್‌ಖಂಡದ ತನಕ ತಮ್ಮ ರಾಜ್ಯವನ್ನು ವಿಸ್ತರಿಸಿದ್ದರು. ರಾಷ್ಟ್ರಕೂಟರು ಸಿಂಧೂ ಪ್ರಾಂತ್ಯದ ಮೂಲೆಗೆ ಸಹ ದಂಡೆತ್ತಿ ಹೋಗಿದ್ದರೆಂದು ಅರಬ್ಬರು ಹೇಳುತ್ತಾರೆ. ರಾಜ್ಯವಿಸ್ತರಣೆಯ ಸಂದರ್ಭದಲ್ಲಿ ಯುದ್ಧವು ಸಾಮಾನ್ಯವಾಗಿದ್ದಂತೆಯೇ ಪೂರಕವಾಗಿ ರಾಷ್ಟ್ರಕೂಟರು ಗಂಗರೊಂದಿಗೆ ಸಂಬಂಧ ಬೆಳಸಿ ಅವರ ನೆರವಿನಿಂದ ಚೋಳರ ವಿರುದ್ಧ ಯುದ್ಧಗಳನ್ನು ನಡೆಸುತ್ತಿದ್ದರು. ಮುಮ್ಮಡಿ ಕೃಷ್ಣನು ಗಂಗ ಬೂತುಗನ ಸಹಾಯದೊಂದಿಗೆ ಚೋಳರ ವಿರುದ್ಧ ದಂಡೆತ್ತಿ ಹೋಗಿ ಚೋಳ ಯುವರಾಜ ರಾಜಾದಿತ್ಯನನ್ನು ನಿಗ್ರಹಿಸಿದನು. ತೊಂಡೈಮಂಡಲವನ್ನು ಗೆದ್ದು ಕಂಚಿಯಿಂದ ತಂಜಾವೂರಿನವರೆಗಿನ ಪ್ರದೇಶವನ್ನು ಆಕ್ರಮಿಸಿ ರಾಮೇಶ್ವರದ ತನಕ ಸಾಗಿ ವಿಜಯಸ್ತಂಭವನ್ನು ಸ್ಥಾಪಿಸಿದನು.
ಇದರಂತೆ ಉತ್ತರದ ದಂಡಯಾತ್ರೆಯನ್ನು ಕೈಗೊಂಡು ಬುಂದೇಲ್‌ಖಂಡದ ಚಂದೇಲರನ್ನು, ಮಾಳವದ ಪರಮಾರ ಸೀಯಕವರ್ಮನನ್ನು ಪರಾಜಿತಗೊಳಿಸಿ ರಾಷ್ಟ್ರಕೂಟರ ಅಧಿಕಾರವನ್ನು ನರ್ಮದೆಯ ಉತ್ತರಕ್ಕೂ ಹಬ್ಬಿಸಲಾಗಿತ್ತು.
ಪೂರ್ವ ಚಾಲುಕ್ಯರಿಗೆ ನೆರವಾಗಿ ಹಳೆಯ ಶತೃತ್ವ ತಗ್ಗಿಸಲು ಯತ್ನಿಸುತ್ತಿದ್ದರು. ಪೂರ್ವ ಚಾಲುಕ್ಯರ ನೆಲೆಯಾದ ವೆಂಗಿಮಂಡಲದಲ್ಲಿ ತಲೆದೋರಿದ್ದ ಅಂತಃಕಲಹಗಳಲ್ಲಿ ಪ್ರವೇಶಿಸಿ ತನಗೆ ಅನುಕೂಲನಾದ ವ್ಯಕ್ತಿಗೆ ವೆಂಗಿರಾಜ್ಯವನ್ನು ವಹಿಸಿಕೊಟ್ಟು ಅವರು ರಾಷ್ಟ್ರಕೂಟರ ಆಳ್ವಿಕೆಯನ್ನು ಒಪ್ಪುವ ಹಾಗೆ ಕೃಷ್ಣನು ಮಾಡಿದನು.
ವಿಸ್ತಾರವಾದ ರಾಜ್ಯ ಪರಿಪಾಲನೆಯಲ್ಲಿ ಹೊಸನಾಡುಗಳನ್ನು ಗೆಲ್ಲುವ ಹಾಗೂ ಗಡಿಗಳನ್ನು ಹಿಗ್ಗಿಸುವ ಸಂಕಲ್ಪ-ಸಂಭ್ರಮಗಳಲ್ಲಿ ದೊರೆಗಳ ಹಾಗೂ ಸಾಮಂತರ ಜೊತೆಗೆ ಪ್ರಜೆಗಳೂ ಸಹಕರಿಸುತ್ತಿದ್ದರು. ವೀರತನ ಆ ಕಾಲದ ಆತ್ಮಾಭಿಮಾನದ ಮೌಲ್ಯವೇ ಆಗಿತ್ತು.
ಪಂಪಕವಿಯ ಆಶ್ರಯದಾತ ವೇಮುಲವಾಡ ಚಾಲುಕ್ಯ ವಂಶದ ಇಮ್ಮಡಿ ಅರಿಕೇಸರಿ. ಈತ ಮುಮ್ಮಡಿ ಕೃಷ್ಣನ ಪ್ರಬಲ ಸಾಮಂತನಾಗಿದ್ದ. ಅರಿಕೇಸರಿಯು ರಾಷ್ಟ್ರಕೂಟ ಇಂದ್ರನ ಪುತ್ರಿ ರೇವಕನಿಮ್ಮಡಿಯನ್ನು ವರಿಸಿದ್ದನೆಂಬುದಾಗಿ ವೇಮುಲವಾಡ ಶಾಸನದಲ್ಲಿ ಹೇಳಲಾಗಿದೆ. ರಾಷ್ಟ್ರಕೂಟರ ೪ನೆಯ ಗೋವಿಂದ ಚಾಲುಕ್ಯರ ವಿಜಯಾದಿತ್ಯನ ಮೇಲೆ ಮುಳಿಯಲು, ವಿಜಯಾದಿತ್ಯನು ಅರಿಕೇಸರಿಗೆ ಶರಣು ಹೋಗಲು, ಅರಿಕೇಸರಿಯು ರಕ್ಷಣೆಯ ನೀಡಿದನೆಂದು ವೇಮುಲವಾಡ ಶಾಸನ ಹಾಗೂ ಪಂಪಕವಿಯ ವಿಕ್ರಮಾರ್ಜುನ ವಿಜಯ ಕೃತಿಗಳಿಂದ ತಿಳಿಯುತ್ತದೆ. ರಾಷ್ಟ್ರಕೂಟರ ಇತಿಹಾಸದಲ್ಲಿ ವೇಮುಲವಾಡ ಚಾಲುಕ್ಯರು (ವಿಶೇಷವಾಗಿ ಇಮ್ಮಡಿ ಅರಿಕೇಸರಿ) ಮುಖ್ಯ ಪಾತ್ರ ವಹಿಸಿದರೆಂದು ಅಂದಿನ ರಾಜಕೀಯ ಚಟುವಟಿಕೆಗಳಿಂದ ತಿಳಿಯಬಹುದಾಗಿದೆ.
ಶ್ರೀ ಆರ್.ಎಸ್.ಪಂಚಮುಖಿಯವರು ಆ ಕಾಲದ ರಾಜಕೀಯ ನಕ್ಷೆಯ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಅವರ ವಿಚಾರಗಳಲ್ಲಿನ ಮುಖ್ಯಾಂಶಗಳು ಹೀಗಿವೆ.
·        ರಾಜಕಾರಣದಲ್ಲಿ ಚಕ್ರವರ್ತಿಗಳು ದುರ್ಬಲರಾಗಿದ್ದರು.
·        ಮಾಂಡಲಿಕ ರಾಜರು ತಮ್ಮ ಪರಾಕ್ರಮಾತಿಶಯಗಳಿಂದ ರಾಜ್ಯದ ನಿರ್ವಾಹಕರಲ್ಲಿ ಜನರಲ್ಲಿ ಗಣ್ಯ ಸ್ಥಾನ ಪಡೆಯುತ್ತಿದ್ದರು.
·        ರಾಜ್ಯ ವಿಸ್ತಾರವಾದಂತೆ ಮಾಂಡಲಿಕರನ್ನು ಅಲ್ಲಲ್ಲಿ ನೇಮಿಸಿದ್ದರಿಂದ ಅಷ್ಟೊಂದು ವಿಶಾಲವಾದ ದೇಶದಲ್ಲಿ ನಿರಾಬಾಧಿತವಾದ ತಮ್ಮ ಅಂಕವನ್ನು ಸ್ಥಿರಪಡಿಸಲು ರಾಷ್ಟ್ರಕೂಟರಿಗೆ ಸಾಧ್ಯವಾಗಲಿಲ್ಲ.
·        ರಾಷ್ಟ್ರಕೂಟ ಸಾಮ್ರಾಜ್ಯದಲ್ಲಿ ಕ್ರಾಂತಿಕಾರದ ಬಂಡುಗಳೆದ್ದ ಕಾಲದಲ್ಲಿ ಲಾಟ, ಪಶ್ಚಿಮ ಗಂಗರ ನೆರವು ಪಡೆಯಲಾಗಿತ್ತು. ಗಂಗ ಬೂತುಗನಿಗೆ ರಾಷ್ಟ್ರಕೂಟ ಅಮೋಘವರ್ಷನು ಮಗಳಾದ ಚಂದ್ರೊಬ್ಬಲಬ್ಬೆಯನ್ನು ಕೊಟ್ಟು ಮದುವೆ ಮಾಡಿದನು.
ಇಲ್ಲಿಯವರೆಗೆ ವಿವರಿಸಲಾದ ರಾಜಕೀಯ ವಿದ್ಯಮಾನಗಳ ಕಾರಣದಿಂದಾಗಿ ಜನರಲ್ಲಿ ತ್ಯಾಗ-ಭೋಗಗಳು, ಶೌರ್ಯ-ಸ್ಥೈರ್ಯಗಳು ಗಮನಾರ್ಹವಾಗಿದ್ದವು. ಸ್ವಾಮಿಭಕ್ತಿ, ದೇಶಭಕ್ತಿಗಳು ಅನಿವಾರ್ಯವೆನಿಸುವಷ್ಟು ಮುಖ್ಯವಾದ ಮೌಲ್ಯಗಳಾಗಿದ್ದವು.
·        ಒಡೆಯನ ಸಲುವಾಗಿ ಪ್ರಾಣ ಕೊಡಲು ಸಿದ್ಧವಾಗಿರುವ ನಿಷ್ಠಾವಂತ ಆಳಿನ ಕರ್ತವ್ಯ ನಿಷ್ಠೆಗೆ ಲೆಂಕವಾಳಿ ಎಂದು ಹೆಸರು.
·        ಒಡೆಯನ ಉಪ್ಪಿನ ಹಂಗು, ಅನ್ನದ ಋಣ ತೀರಿಸುವ ಸಂಕಲ್ಪಕ್ಕೆ ಜೋಳವಾಳಿ ಹಾಗೂ ಒಡೆಯನು ಮರಣ ಹೊಂದಿದರೆ ಅವನ ಸೇವಕನು ತಾನೂ ಸಾಯುವುದಾಗಿ ಪ್ರತಿಜ್ಞೆ ಮಾಡಿ ಅದರಂತೆ ನಡೆದುಕೊಳ್ಳುವ ಪದ್ಧತಿಗೆ ವೇಳೆವಾಳಿ ಎಂದು ಹೆಸರು.
·        ಕಳ್ಳರು ಊರೊಳಗೆ ನುಗ್ಗಿ ದನಕರುಗಳನ್ನು ಸೆರೆ ಹಿಡಿದು ಗ್ರಾಮಧನವನ್ನು ಸೂರೆ ಮಾಡಿದಾಗ ಊರಿನ ಜನರು ದನಕರುಗಳನ್ನು ಬಿಡಿಸಿಕೊಂಡು ಬರಲು ಕೆಚ್ಚಿನಿಂದ ಹೋರಾಡುವ ಸಂದರ್ಭಗಳಿದ್ದವು. ಇವನ್ನು ತುರುಗೋಳ್ ಎಂದು ಕರೆಯುತ್ತಿದ್ದರು. ಸಂಸ್ಕೃತದ ಗೋಗ್ರಹಣ ಪದಕ್ಕೆ ಸಂವಾದಿಯಾದ ಕನ್ನಡ ಶಬ್ದವಿದು.
·        ಸಂಕಷ್ಟದಲ್ಲಿರುವ ಸ್ತ್ರೀಯರ ಮಾನರಕ್ಷಣೆಗೆ ಕೂಡ ಹೋರಾಟ ನಡೆಯುತ್ತಿದ್ದವು. ಇವನ್ನು ಪೆಣ್ಬುಯ್ಯಲ್ ಎಂದು ಕರೆಯಲಾಗಿತ್ತು. ಅದರಂತೆ ಪತಿಯ ಪರೋಕ್ಷದಲ್ಲಿ ಸತಿ ಸಹಗಮನ ಮಾಡುವಾಗ ಆಕೆಯ ಧೈರ್ಯ-ತ್ಯಾಗಗಳನ್ನು, ಪತಿಭಕ್ತಿಯ ಪರಾಕಾಷ್ಠೆಯನ್ನು ಮೆಚ್ಚಬೇಕಾಗುತ್ತದೆ. ಹೀಗೆ ಮಾಸ್ತಿಕಲ್ಲು, ವೀರಗಲ್ಲುಗಳನ್ನು ಹಾಕಿಸುವುದು ಹೆಚ್ಚಿತ್ತು.
·        ಗೆದ್ದು ಬಂದ ಶೂರರಿಗೆ ಚಿನ್ನದ ಕಡಗಗಳನ್ನು ತೊಡಿಸಿ, ಮಾನ್ಯ ಉಂಬಳಿಗಳನ್ನು ಹಾಕಿಸಿಕೊಟ್ಟು, ಸನ್ಮಾನಿಸುವ ಪದ್ಧತಿ ರೂಢಿಯಲ್ಲಿತ್ತು. ಸತ್ತ ಶೂರರ ಸಂಬಂಧಿಗಳಿಗೆ ಜೀವನ ನಿರ್ವಹಣೆಗೆಂದು ನೆತ್ತರು ಕೊಡುಗೆಗಳು ಸಲ್ಲುತ್ತಿದ್ದವು. ರಕ್ತಸಿಕ್ತವಾದ ಕತ್ತಿಯನ್ನು ತೊಳೆದು ಆಚರಿಸುವ ಪದ್ಧತಿಗೆ ಬಾಳ್ಗೞ್ಚು ಎಂದು ಹೆಸರು.
೧೦ನೆಯ ಶತಮಾನದ ಧಾರ್ಮಿಕ ಜೀವನ ಹೆಚ್ಚು ಉದಾರವೂ ಸಹಿಷ್ಣುವೂ ಆಗಿತ್ತು. ವರ್ಣ ಜಾತಿಗಳ ತರತಮ ಭಾವನೆ ಸ್ಪಷ್ಟವಾಗಿತ್ತು. ಕುಲಪ್ರಜ್ಞೆ ಉತ್ಕಟವಾಗಿತ್ತು. ಸಾಮಾಜಿಕ ವರ್ಗಗಳೂ, ಕಟ್ಟುಪಾಡುಗಳೂ ರೂಪಿತವಾಗಿದ್ದವು. ಜಾತಿ ಹುಟ್ಟಿನಿಂದ, ಧರ್ಮ ಆನಂತರ ಅಂಗೀಕರಿಸಬಹುದು ಎನ್ನುವುದು ಸಮ್ಮತಿಯೋಗ್ಯ. ಪಂಪ ಬ್ರಾಹ್ಮಣ ಮತ್ತು ಜೈನ ಧರ್ಮಗಳ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದನ್ನು ಗಮನಿಸಬಹುದು.
ಲೌಕಿಕರ ಜೀವನದಲ್ಲಿ ಮೌಲ್ಯಗಳಾಗಿ ನಿಷ್ಠೆ, ಸತ್ಯ, ತ್ಯಾಗ, ಶೌರ್ಯ, ದಾನ ಗುಣಗಳು ಹಾಗೂ ಧಾರ್ಮಿಕರ ಜೀವನದಲ್ಲಿ ಯೋಗ, ವೈರಾಗ್ಯ, ತಪಸ್ಸು, ಬ್ರಹ್ಮಚರ್ಯಗಳು ಅನುಸರಣಯೋಗ್ಯಗಳೆಂದು ಪ್ರತಿಪಾದಿತವಾಗುತ್ತಿದ್ದವು. ಕೆರೆ-ಕಟ್ಟೆ, ಬಸದಿ-ದೇಗುಲ, ಸತ್ರ-ಅರವಟ್ಟಿಗೆಗಳ ನಿರ್ಮಾಣ ಧರ್ಮದ ಭಾಗವಾಗಿತ್ತು. ಸಾಹಿತ್ಯ, ಲಲಿತಕಲೆ, ಸಂವಾದ, ರಸಿಕತೆ, ಸಹಾಯಬುದ್ಧಿ ವ್ಯಕ್ತಿ ಜೀವನದ ಮುಖ್ಯ ಲಕ್ಷಣಗಳೆಂದು ನಿರೂಪಿಸಲಾಗಿದೆ.
ಜೈನಧರ್ಮದ ಕ್ಷೀಣತೆಯ ಕಾಲವೆಂದು ೧೦ನೆಯ ಶತಮಾನವನ್ನು ಪರಿಗಣಿಸಲಾಗುತ್ತದೆ. ಶೈವ-ವೈಷ್ಣವ ಧರ್ಮಗಳ ಪ್ರಸಾರ ಹೆಚ್ಚುತ್ತಲೇ ಜೈನಧರ್ಮ ಸ್ಪರ್ಧೆಗಿಳಿದಂತಾಗಿತ್ತು. ಉತ್ತರ ಕರ್ನಾಟಕದಲ್ಲಿ ಚಾಲುಕ್ಯರು ಹಾಗೂ ದಕ್ಷಿಣ ಕರ್ನಾಟಕದಲ್ಲಿ ಚೋಳರು ವೈದಿಕ ಧರ್ಮಕ್ಕೆ ಒತ್ತಾಸೆ ನೀಡುತ್ತಿದ್ದರು. ಜೈನಧರ್ಮದ ಸಂಸ್ಕೃತ-ಕನ್ನಡ ಕವಿಗಳು ಪ್ರಬಲವಾಗಿ ಪ್ರಯತ್ನಗಳನ್ನು ನಡೆಸುತ್ತಿದ್ದರು. ಈ ಸ್ಥಿತಿಯಲ್ಲಿ ರಾಷ್ಟ್ರಕೂಟರು, ಗಂಗರು ಜೈನಧರ್ಮದ ಪೋಷಣೆಗೆ ನೆರವಾದ್ದರಿಂದ ಬಸದಿಗಳು ನಿರ್ಮಾಣವಾದವು, ಜೈನ ಪುರಾಣಗಳು ರಚನೆಗೊಂಡವು.
೧೦ನೆಯ ಶತಮಾನದಲ್ಲಿ ಮಠಗಳು, ಅಗ್ರಹಾರಗಳು ವಿದ್ಯಾಕೇಂದ್ರಗಳಾಗಿದ್ದವು. ದೊರೆಗಳೂ, ಸಾರ್ವಜನಿಕರೂ ಉದಾರ ಕೊಡುಗೆಗಳನ್ನು ನೀಡುತ್ತಿದ್ದರು. ವಿವಿಧ ವಿಷಯಗಳಲ್ಲಿ ವಿದ್ಯಾಭ್ಯಾಸ ದೊರೆಯುತ್ತಲೇ ಪ್ರೋತ್ಸಾಹ ಕೂಡ ಅಧಿಕವಾಗಿತ್ತು.
ರಾಜ್ಯವು ಕೃಷಿ, ಉತ್ಪಾದನೆ, ವ್ಯಾಪಾರ-ವಾಣಿಜ್ಯಗಳಿಂದ ಆರ್ಥಿಕವಾಗಿ ಸದೃಢವಾಗಿತ್ತು. ಸಾಹಿತ್ಯವನ್ನು ಪೋಷಿಸುವವರ ಸಂಖ್ಯೆ ಹೆಚ್ಚಿತ್ತು. ಆಗಿನ ಧಾರ್ಮಿಕ ಸಂಸ್ಥೆಗಳು ಲೌಕಿಕ ಮತ್ತು ಧಾರ್ಮಿಕ ಶಿಕ್ಷಣಗಳನ್ನು ನೀಡುತ್ತಿದ್ದವು. ಸಂಸ್ಕೃತ, ಕನ್ನಡ - ಎರಡೂ ಭಾಷೆಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳು ನಡೆದುದು ಸಹಜವಾಗಿತ್ತು.
೧೦ನೆಯ ಶತಮಾನವು ಸಾಹಿತ್ಯೋಜ್ಜೀವನದ ಕಾಲ. ಐಹಿಕ-ಪಾರಲೌಕಿಕಗಳನ್ನು ಸಮನ್ವಯಿಸಿಕೊಂಡು ಜೀವನಶ್ರದ್ಧೆಯ ಬೆಳಕಿನಲ್ಲಿ ಶಿಕ್ಷಣ ನಡೆಯುತ್ತಿತ್ತು. ವಿದ್ವಾಂಸ ಗುರುಗಳಲ್ಲಿ ಧರ್ಮ-ಕಾವ್ಯಶಾಸ್ತ್ರ ವ್ಯಾಸಂಗವನ್ನು ಸಾಂಗವಾಗಿ ಪೂರ್ಣಗೊಳಿಸುವ ಮೊದಲು ಸ್ವಂತವಾಗಿ ಕಾವ್ಯರಚನೆಗೆ ತೊಡಗುತ್ತಿರಲಿಲ್ಲ. ಕೆಲವೇ ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ರಚಿಸಿ ಕೃತಕೃತ್ಯರಾಗುತ್ತಿದ್ದರು. ಅರ್ಹತೆ ಹಾಗೂ ಜನಪ್ರಿಯತೆಗೆ ಅನುಸಾರವಾಗಿ ರಾಜಾಶ್ರಯವೂ, ವಿದ್ವಜ್ಜನರ ಪ್ರೋತ್ಸಾಹವೂ ದೊರೆಯುತ್ತಿತ್ತು. ಆ ಕಾಲದ ಪ್ರಚಲಿತ ಮೌಲ್ಯಗಳ ಪರಿಸ್ಥಿತಿಗಳ ಹಾಗೂ ವಿದ್ಯಮಾನಗಳ ಪ್ರತಿಬಿಂಬವನ್ನು ಕೃತಿಗಳಲ್ಲಿ ಕಾಣಬಹುದಾಗಿದೆ. ಕವಿಗಳೆಲ್ಲ ಜೀವನಪ್ರೀತಿ, ಸೌಂದರ‍್ಯಾಸ್ವಾದದ ದೃಷ್ಟಿಗಳು ತುಂಬಿದ ಸಾಂಸಾರಿಕ ಧರ್ಮವನ್ನು ಪೋಷಿಸಿಕೊಂಡೇ ಸ್ವಮತದಲ್ಲಿ ನಿಷ್ಠೆ, ಅನ್ಯಮತದಲ್ಲಿ ಸಹಿಷ್ಣುತೆಗಳು ಜಾಗೃತವಾಗಿರುವ ಉದಾರ ಮಾನವಧರ್ಮವನ್ನು ಪಾಲಿಸುತ್ತಿದ್ದರು. ಸಾಮರಸ್ಯ, ಸೌಖ್ಯವನ್ನು ಸಾಧಿಸುವ ಹೆದ್ದಾರಿಗಳು ಈ ಕವಿಗಳ ಸಾಧನೆಗಳಿಂದ ನಿರ್ಮಾಣವಾಗಿವೆ.
ಪಂಪ ಕವಿಯ ಕಾಲ-ದೇಶದ ವಿಚಾರ:
ಪಂಪನ ಜೀವನದ ಸಂಗತಿಗನ್ನು ತಿಳಿಯಲು ೧) ಆದಿಪುರಾಣ, ೨) ಪಂಪಭಾರತ (ವಿಕ್ರಮಾರ್ಜುನ ವಿಜಯ) ಹಾಗೂ ೩) ಆಂದ್ರಪ್ರದೇಶದ ಕರೀಂನಗರ್ ಜಿಲ್ಲೆಗೆ ಸೇರಿದ ಕುರ್ಕ್ಯಾಲ ಗ್ರಾಮದ ಬಂಡೆಗಲ್ಲು ಶಾಸನ ಪ್ರಮುಖವಾದ ಆಕರಗಳಾಗಿವೆ. ಜೊತೆಗೆ ಅರಿಕೇಸರಿಯ ಕರೀಂನಗರ ಮ್ಯೂಸಿಯಂ ಶಾಸನ ಹಾಗೂ ವೇಮುಲವಾಡದ ಶಿಲಾಶಾಸನಗಳು ಆಧಾರವಾಗುತ್ತವೆ.
ಪಂಪ ಹುಟ್ಟಿದ್ದು ಶಾಲಿವಾಹನ ಶಕ ೮೨೪ರ ದುಂದುಭಿನಾಮ ಸಂವತ್ಸರದಲ್ಲಿ. ಇದು ಕ್ರಿ.ಶ. ೯೦೨-೯೦೩ಕ್ಕೆ ಸರಿಯಾಗುತ್ತದೆ. ಕುರ್ಕ್ಯಾಲ ಶಾಸನವು ರಚಿತಗೊಂಡಿರಬಹುದಾದ ಕ್ರಿ.ಶ. ಸು.೯೫೦ರ ಒಳಗೆ ಪಂಪ ತೀರಿಕೊಂಡಿರಬೇಕು ಎಂಬುದಕ್ಕೆ ಶಾಸನದಲ್ಲಿ ಕೆಲವು ಸೂಚ್ಯ ಸಾಕ್ಷಿಗಳಿವೆ. ಹೀಗಾಗಿ ಅವನ ಜೀವಿತ ಕಾಲವನ್ನು ಬಹುಶಃ ೯೦೨-೯೫೦ ಎಂದು ಹೇಳಲಾಗುತ್ತಿದೆ.
ಶಾಲಿವಾಹನ ಶಕ ೮೬೩ರ ಪ್ಲವನಾಮ ಸಂವತ್ಸರದಲ್ಲಿ ಅಂದರೆ ಕ್ರಿ.ಶ. ೯೪೧-೪೨ಕ್ಕೆ ಹೊಂದುವ ಕಾಲದಲ್ಲಿ ಪಂಪನು ಆದಿಪುರಾಣವನ್ನು ರಚಿಸಿದನು. ಆಗ ಪಂಪನಿಗೆ ೪೦ ವರ್ಷ ವಯಸ್ಸಾಗಿತ್ತು. ಆದಿಪುರಾಣವನ್ನು ಕ್ರಿ.ಶ. ೯೪೨ರಲ್ಲಿ ಕೇವಲ ಮೂರು ತಿಂಗಳ ಅವಧಿಯೊಳಗೆ ರಚಿಸಿದ ಮೇಲೆ ಅರಿಕೇಸರಿಯ ಕೋರಿಕೆಯಂತೆ ಪಂಪಭಾರತವನ್ನು ರಚಿಸಿರಬೇಕು. ಜೊತೆಗೆ ವೇಮುಲವಾಡದ ಶಾಸನದ ಕಾಲದಿಂದ ಪಂಪ ಅರಿಕೇಸರಿಯ ಆಸ್ಥಾನವನ್ನು ತನ್ನ ೨೦-೨೫ರ ಹರೆಯದಲ್ಲಿ ಸೇರಿರುವುದು ಸಾಧ್ಯವೆಂದು ಹೇಳಬಹುದು. ಅಲ್ಲದೇ ಅರಿಕೇಸರಿಯ ವೇಮುಲವಾಡ ಶಾಸನದ ಕರ್ತೃವು ಪಂಪನೇ ಆಗಿರಬಹುದು ಎಂಬ ಊಹೆಯೂ ಇದೆ.
ಕುರ್ಕ್ಯಾಲ ಶಾಸನದ ಆಧಾರದಿಂದ ಪಂಪನ ಜನನ ತನ್ನ ತಾಯಿಯ ತವರುಮನೆ - ಅಣ್ಣಿಗೇರಿಯಲ್ಲಿ ಆಗಿರಬಹುದೆಂದು ಊಹಿಸಲಾಗಿದೆ. ಪಂಪನ ಜನನ-ಬಾಲ್ಯ-ಯೌವನಗಳಿಗೆ ಈಗಿನ ಕರ್ನಾಟಕದ ಧಾರವಾಡ-ಗದಗ-ಉತ್ತರ ಕನ್ನಡ ಜಿಲ್ಲೆಗಳ ಪ್ರದೇಶ ತೂಗುತೊಟ್ಟಿಲಾಗಿರಬೇಕು. ಶಸ್ತ್ರ-ಶಾಸ್ತ್ರಗಳ ವಿದ್ಯಾಭ್ಯಾಸವೂ ಈ ಪ್ರದೇಶಗಳಲ್ಲೇ ನಡೆದಿರಬೇಕು. ಪಂಪನ ಬಾಲ್ಯ-ಯೌವನಗಳು ಬನವಾಸಿ/ಬೆಳ್ವೊಲ ಪ್ರಾಂತದಲ್ಲಿಯೂ ಕ್ರಿಯಾಶೀಲವಾದ ವೃತ್ತಿ-ಸಾಹಿತ್ಯಿಕ ಜೀವನವು ಸಬ್ಬಿನಾಡಿನಲ್ಲಿಯೂ (ಬೋದನ-ವೇಮುಲವಾಡಗಳ ಪ್ರದೇಶ) ಜರುಗಿರುವುದು ಸ್ಪಷ್ಟವಾಗಿದೆ. ಪಂಪಭಾರತದಲ್ಲಿ ಧಾರವಾಡ-ಉತ್ತರ ಕನ್ನಡ ಸೀಮೆಯ ಗೋಕರ್ಣನಾಥನನ್ನು, ವನವಾಸಿ/ಬನವಾಸಿ ದೇಶವನ್ನು ಪ್ರೀತಿಯಿಂದ ನೆನೆಯುತ್ತಾನೆ. ವರದಾ ನದಿಯ ಪ್ರಸ್ತಾಪದ ಜೊತೆಗೆ ಪುಲಿUರೆಯ ತಿರುಳ್ಗನ್ನಡವನ್ನು ಹೇಳುತ್ತಾನೆ. ಈಗಿನ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಲಕ್ಷ್ಮೇಶ್ವರವೇ ಆ ಪುಲಿಗೆರೆ.
ಅರಿಕೇಸರಿಯ ಆಸ್ಥಾನಕ್ಕೆ ಪಂಪನೇ ಮೊದಲು ಬಂದದ್ದು. ಗೌರವ, ಸನ್ಮಾನಗಳ ಫಲವಾಗಿ ಅಲ್ಲಿಯೆ ನೆಲೆಸಿರಬಹುದೆಂದು ಊಹಿಸಲಾಗಿದೆ. ವಿಶ್ರಾಂತಿ/ಕೊನೆಯ ದಿನಗಳನ್ನು ಕಳೆದ ಸ್ಥಳದ ಬಗ್ಗೆ ವಿವರಗಳಿಲ್ಲವಾದರೂ, ಅರಿಕೇಸರಿಯಿಂದ ದತ್ತವಾದ ಧರ್ಮಪುರ ಅಗ್ರಹಾರದಲ್ಲಿ ಸಮಾಧಾನದಿಂದ ಕೊನೆಯ ದಿನಗಳನ್ನು ಕಳೆದಿರಬಹುದು ಅಥವಾ ಸ್ನೇಹ-ವಿಶ್ವಾಸದ ಅರಿಕೇಸರಿಯ ರಾಜಧಾನಿ ಬೋದನದಲ್ಲಿಯೋ ವೇಮುಲವಾಡದಲ್ಲಿಯೋ ಕಾಲ ಕಳೆದಿರಬಹುದೆಂದು ಭಾವಿಸಲು ಮಾತ್ರ ಸಾಧ್ಯವಿದೆ.

ಒಟ್ಟಿನಲ್ಲಿ ೧೦ನೆಯ ಶತಮಾನದ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಪ್ರಭಾವಗಳು ಪಂಪನ ಕೃತಿಗಳ ಮೇಲೆ ಒತ್ತಡ ಹೇರುವುದಲ್ಲದೆ, ಕೃತಿಯ ಸೌಂದರ್ಯ ಹೆಚ್ಚುವಂತೆ ಮಾಡಿವೆ. ಪಂಪನ ಕೃತಿಗಳಲ್ಲಿ ಆ ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಜೀವನದ ವಿವರಗಳನ್ನು ಸೂಕ್ಷ್ಮವಾಗಿ ಗುರುತಿಸಬಹುದು.

ಸೋಮವಾರ, ಜುಲೈ 29, 2013

ರಾಷ್ಟ್ರಕೂಟ ಮೂರನೆಯ ಕೃಷ್ಣ ಹಾಗೂ ಜುರ ಶಾಸನ

(ಲೇಖಕರು: ಡಾ|| ಎಚ್.ಎಸ್. ಗೋಪಾಲ ರಾವ್)
ಭಾಷೆ ಎಂದರೇನು ಎಂಬ ಪ್ರಶ್ನೆ ಒಂದಲ್ಲ ಒಂದು ಸಂದರ್ಭದಲ್ಲಿ ಎಲ್ಲರನ್ನೂ ಕಾಡುತ್ತದೆ. ಅದು ಮಾತು ಬಲ್ಲವನ ಭಾವನೆಗಳ ಅಭಿವ್ಯಕ್ತಿಗಿರುವ ಸಾಧನ. ಶ್ರವ್ಯವಾದ ಭಾಷೆಗೆ ಚಾಕ್ಷುಷ ರೂಪ ದೊರೆತಾಗ ಲಿಪಿ ಹುಟ್ಟುತ್ತದೆ. ಯಾವುದೇ ವಿಚಾರವನ್ನು ಇತರರೊಡನೆ ವಿನಿಮಯ ಮಾಡಿಕೊಳ್ಳಬೇಕಾದಾಗ ಮಾತು ಮತ್ತು ಬರವಣಿಗೆಯನ್ನು ಬಳಸಿಕೊಳ್ಳುವುದು ರೂಢಿ. ಕನ್ನಡ ಮಾತನಾಡಲು ಬಾರದ, ಕನ್ನಡ ಓದಲು ಬಾರದ ಯಾರಿಗೇ ಆದರೂ ಕನ್ನಡದಲ್ಲಿ ಹೇಳಿ ಅಥವಾ ಬರೆದು ತಿಳಿಸುವುದು ಕಷ್ಟದ ಕೆಲಸ. ಈ ಮಾತು ಎಲ್ಲ ಭಾಷೆ ಮತ್ತು ಲಿಪಿಗಳಿಗೂ ಅನ್ವಯಿಸುತ್ತದೆ. ಕೇವಲ ಕನ್ನಡವನ್ನು ಅರ್ಥಮಾಡಿಕೊಳ್ಳಬಲ್ಲವರಿಗೆ ಇಂಗ್ಲಿಷ್, ಹಿಂದಿ, ತಮಿಳು ಅಥವಾ ಮತ್ತಾವುದೇ ಭಾಷೆಯಲ್ಲಿ ಹೇಳಿದಾಗ ಭಾಷೆಯು ಅಪ್ರಯೋಜಕವಾಗುತ್ತದೆ. ತಿಳಿಸಲೇಬೇಕಾದ ವಿಷಯವು ಪರಸ್ಪರ ವಿನಿಮಯವಾಗುವುದೇ ಇಲ್ಲ. ಆಗ ಭಾಷೆ ಸೋಲುತ್ತದೆ. ಅಂತಹ ಸನ್ನಿವೇಶಗಳಲ್ಲೇ ಲಿಪಿಗೂ ಸೋಲಾಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ತಿಳಿಸಲೇಬೇಕಾಗಿರುವ ವಿಷಯ, ತಿಳಿಯಲೇಬೇಕಾದವರಿಗೆ ತಿಳಿಯುವಂತಾಗಲು ಅವರಿಗೆ ಅರ್ಥವಾಗುವ ಭಾಷೆ ಮತ್ತು ಲಿಪಿಯಲ್ಲೇ ಇರಬೇಕಾದ್ದು ಅವಶ್ಯಕ. ಪರಸ್ಪರ ಪಾರದರ್ಶಕವಾಗಿ ವ್ಯವಹರಿಸಬೇಕು ಎನ್ನುವವರಿಗೆ ಈ ತಿಳಿವಳಿಕೆ ಅವಶ್ಯಕ. ಯಾವುದೇ ಪ್ರದೇಶದಲ್ಲಿ ಆಡಳಿತ ನಡೆಸುವವರಿಗೂ ಈ ಕನಿಷ್ಟ ಪರಿಜ್ಞಾನವಿರಬೇಕು ಎಂದು ನಿರೀಕ್ಷಿಸುವುದು ತಪ್ಪಲ್ಲ. ಅರ್ಥವಾಗದ ಭಾಷೆ ಮತ್ತು ಲಿಪಿಯಲ್ಲಿ ವ್ಯಕ್ತಪಡಿಸಿದ ಯಾವುದೇ ವಿಷಯದ ಬಗ್ಗೆ ಸಂಶಯ ಬಂದರೆ ತಪ್ಪಲ್ಲ; ಅದು ಪಾರದರ್ಶಕ ಅಭಿವ್ಯಕ್ತಿಯಲ್ಲ. ಇದು ಎಲ್ಲ ಕಾಲಕ್ಕೆ, ಎಲ್ಲ ಪ್ರದೇಶಗಳಿಗೆ ಅನ್ವಯಿಸುವ ಮಾತು.
ನಮ್ಮ ಗುರುತಿಗೆ ಇರುವುದು ನಮ್ಮ ಭಾಷೆ. ನಮ್ಮ ವಾಸ ಸ್ಥಳ ಬದಲಾಗುತ್ತಿರುತ್ತದೆ. ನಮ್ಮ ಹೆಸರಿನ ಜೊತೆಗೆ ನಮ್ಮ ಊರಿನ ಹೆಸರು ಅಥವಾ ಕುಟುಂಬದ ಸಂಕೇತವಾದ ಅಕ್ಷರವಿದ್ದರೂ, ನಮ್ಮ ಅಸ್ಮಿತೆ ಇರುವುದು ನಮ್ಮ ಭಾಷೆಯ ಜೊತೆಗೇ ಆದ್ದರಿಂದ ಭಾಷೆಯ ಜೊತೆ ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಹೆಮ್ಮೆಯ ವಿಷಯ. ಆಳುವ ಜನರಿಗೆ ಈ ಕನಿಷ್ಟ ತಿಳಿವಳಿಕೆ ಇದ್ದರೆ, ಆಳಿಸಿಕೊಳ್ಳುವವರ ಭಾಷೆಯಲ್ಲಿ ಆಡಳಿತ ನಡೆಸುತ್ತಾರೆ. ತಮಗೆ ಮಾತ್ರ ಅರ್ಥವಾಗುವ ಭಾಷೆಯಿಂದ ಜನರನ್ನು ಮುಕ್ತಗೊಳಿಸುತ್ತಾರೆ.
ಹಿಂದೆ ಆಳಿದವರಿಗೆ ಬಹುತೇಕ ಇಂತಹ ತಿಳಿವಳಿಕೆ ಇತ್ತು. ಆದ್ದರಿಂದ ಎಲ್ಲರಿಗೆ ತಿಳಿಸಬೇಕಾದ್ದನ್ನು ಸಾರ್ವಜನಿಕವಾಗಿ, ಲೋಕದ ಭಾಷೆ ಮತ್ತು ಲಿಪಿಯಲ್ಲಿ ತಿಳಿಸಿದ್ದಾರೆ. ಈ ಮಾತಿಗೆ ಉದಾಹರಣೆಯಾಗಿ ಅನೇಕ ಶಾಸನಗಳಿವೆ. ಕೆಲವು ಖಾಸಗಿ, ಅದೂ ಮೇಲ್ವರ್ಗದವರಿಗೆ ಸಂಬಂಧಿಸಿದ ಖಾಸಗಿ ಆದೇಶಗಳು ಲೋಹ, ಅದರಲ್ಲೂ ತಾಮ್ರ ಪಟ್ಟಿಕೆಗಳ ಮೇಲಿದ್ದು, ಅವುಗಳ ಭಾಷೆ ಸಂಸ್ಕೃತವಾದರೂ, ಬಳಸಿದ ಲಿಪಿ ಕರ್ನಾಟಕದಲ್ಲಿ ಸಾಮಾನ್ಯವಾಗಿ  ಕನ್ನಡವೇ ಆಗಿದೆ.
ಆಳುವವರ ಇಂತಹ ಸಾಮಾನ್ಯ ತಿಳಿವಳಿಕೆಗೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿರುವ ರಾಷ್ಟ್ರಕೂಟ ದೊರೆ ಮೂರನೆಯ ಕೃಷ್ಣನ ಕೆಲವು ತಮಿಳು ಶಾಸನಗಳನ್ನು ನೆನಪು ಮಾಡಿಕೊಳ್ಳುತ್ತಲೇ, ಸಂಸ್ಕೃತಿಯ ಕೊಂಡಿಯಾದ ಭಾಷೆಯು ತನ್ನ ಮಿತಿಗಳನ್ನು ಮೀರಿರುವ ಕೆಲವು ಸಂದರ್ಭಗಳನ್ನೂ ಅವಲೋಕಿಸಬೇಕಾಗುತ್ತದೆ. ರಾಷ್ಟ್ರಕೂಟ ದೊರೆ ಮೂರನೆಯ ಕೃಷ್ಣನ ಜುರ ಶಾಸನವನ್ನು ಈ ನಿಟ್ಟಿನಲ್ಲಿ ಪರಿಶೀಲಿಸುವುದು ಅವಶ್ಯಕ. ಮೊದಲಿಗೆ ಪಲ್ಲವರನ್ನು ಗೆದ್ದು ಕಾಂಚಿ ಮತ್ತು ತಂಜಾವೂರುಗಳನ್ನು ವಶಪಡಿಸಿಕೊಂಡು, ಕಂಚಿಯನ್ನು ವಶಪಡಿಸಿಕೊಂಡ ನೆನಪಿಗೆ ಕಚ್ಚೆಗಎಂಬ ಬಿರುದನ್ನು ತನ್ನ ಹೆಸರಿನ ಜೊತೆಗೆ ಸೇರಿಸಿಕೊಂಡ ಮೂರನೆಯ ಕೃಷ್ಣ, ಉತ್ತರದಲ್ಲೂ ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದ. ತಮಿಳುನಾಡಿನಲ್ಲಿ ಜನತೆಯ ತಿಳಿವಳಿಕೆಗೆ ಬರಲಿ ಎಂಬ ಕಾರಣದಿಂದ ತಮಿಳು ಭಾಷೆಯಲ್ಲೇ ಶಾಸನಗಳನ್ನು ಹಾಕಿಸಿದ ಮೂರನೆಯ ಕೃಷ್ಣ, ಮಹಾರಾಷ್ಟ್ರ ಮತ್ತು ಉತ್ತರ ಭಾರತದಲ್ಲಿ ಸಂಸ್ಕೃತ ಭಾಷೆ ಮತ್ತು ಹೆಚ್ಚಿಗೆ ನಾಗರಿ ಲಿಪಿಯಲ್ಲಿ ಶಾಸನಗಳನ್ನು ಹಾಕಿಸಿದ್ದಾನೆ. ಇದು ಒಪ್ಪಬೇಕಾದ ಕ್ರಮ. ಆದರೆ ಮಧ್ಯಪ್ರದೇಶದ ಜಬ್ಬಲ್‌ಪುರ ಜಿಲ್ಲೆಯ ಈಶಾನ್ಯದ ಗಡಿಭಾಗದಲ್ಲಿರುವ ಜುರ ಎಂಬ ಗ್ರಾಮದಲ್ಲಿ ಒಂದು ಅಪರೂಪದ ಶಿಲಾಶಾಸನವಿದೆ. ಇದು ಕರ್ನಾಟಕದಿಂದ ಬಹಳ ಎನ್ನುವಷ್ಟು ದೂರದ ಸ್ಥಳದಲ್ಲಿರುವ ಕನ್ನಡ ಭಾಷೆ ಮತ್ತು ಲಿಪಿಯ ಶಾಸನ. ಇದು ಕನ್ನಡಿಗರು ತಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವ ವಿಷಯವನ್ನೊಳಗೊಂಡಿದೆ. ಯಾರಾದರೂ ಕನ್ನಡಿಗರ ಸಂಸ್ಕೃತಿಯ ಬಗ್ಗೆ ಕೇಳಿದರೆ ಉದಾಹರಿಸಲೇಬೇಕಾದ ಮಹತ್ವದ ಶಾಸನ. ಬಹಳ ಮುಖ್ಯವಾದ ವಿಚಾರವೆಂದರೆ ಇದು ದಾನಶಾಸನವಲ್ಲ; ಇದೊಂದು ಅಪರೂಪದ ಪ್ರಶಸ್ತಿ ಶಾಸನ. ಯಾರೋ ರಾಜ ಅಥವಾ ಅಧಿಕಾರಿ ಹಾಕಿಸಿರುವ ಶಾಸನ ಇದಲ್ಲ. ಬಹುತೇಕ, ಸಾಮಾನ್ಯ ವರ್ಗಕ್ಕೆ ಸೇರಿದ ವ್ಯಕ್ತಿಯೊಬ್ಬ ಹಾಕಿಸಿರುವ ಈ ಪ್ರಶಸ್ತಿಯು ರಾಷ್ಟ್ರಕೂಟ ದೊರೆ ಮೂರನೆಯ ಕೃಷ್ಣನನ್ನು ಕುರಿತಿರುವುದು ವಿಶೇಷ.
ಮೂರನೆಯ ಕೃಷ್ಣನು ಉತ್ತರ ಬಾರತದಲ್ಲಿ ಬುಂದೇಲ್‌ಖಂಡವನ್ನು ಗೆದ್ದು, ಉಜ್ಜಯಿನಿಯನ್ನೂ ವಶಪಡಿಸಿಕೊಂಡ ಎಂಬುದು ಇತಿಹಾಸ. ಹಾಗೆ ಉತ್ತರ ಭಾರತದ ಕೆಲವು ಭಾಗಗಳನ್ನು ವಶಪಡಿಸಿಕೊಂಡ ಮೂರನೆಯ ಕೃಷ್ಣ ಆ ಪ್ರಧೇಶಗಳನ್ನು ಆಳಿದನೆ ಎಂಬ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಇಲ್ಲ ಎನ್ನಲಾಗಲೀ, ಹೌದು ಎನ್ನಲಾಗಲೀ ಸಾಕ್ಷಿಗಳು ಇಲ್ಲ. ತಮಿಳುನಾಡು ಅವನ ಆಳ್ವಿಕೆಗೆ ಸೇರಿದ್ದ ಕಾರಣದಿಂದ ಅವನ ಶಾಸನಗಳು ತಮಿಳುನಾಡಿನಲ್ಲಿವೆ ಮತ್ತು ಅವು ತಮಿಳು ಭಾಷೆಯಲ್ಲೇ ಇವೆ. ಮಧ್ಯ ಪ್ರದೇಶದ ಜುರದಲ್ಲಿ ಸಿಕ್ಕಿರುವ ಶಾಸನ ಕನ್ನಡ ಭಾಷೆ ಮತ್ತು ಲಿಪಿಯಲ್ಲಿರುವುದು ವಿಶೇಷ. ಈ ಭಾಗದಲ್ಲಿ ಈಗಂತೂ ಕನ್ನಡಿಗರಿಲ್ಲ. ಆ ಕಾಲಕ್ಕೂ ಇದ್ದಿರುವ ಸಾಧ್ಯತೆಗಳು ಕಡಿಮೆ. ಮಹಾರಾಷ್ಟ್ರದ ಗೋದಾವರಿಯವರೆಗಿನ ಪ್ರದೇಶದಲ್ಲಿ ಕನ್ನಡದ ನೆಲೆಗಳನ್ನು ಹುಡುಕುವುದು ಸಾಧ್ಯವಾಗಬಹುದು. ಮಧ್ಯಪ್ರದೇಶದ ದಕ್ಷಿಣದಲ್ಲೂ ಪ್ರಯತ್ನಿಸಿದರೆ ಕನ್ನಡದ ನೆಲೆಗಳ ಸುಳಿವು ದೊರೆಯಬಹುದು; ಆದರೆ ಅದಕ್ಕಿಂತ ಮೇಲೆ ಕನ್ನಡದ ನೆಲೆಗಳನ್ನು ಹುಡುಕುವುದು ಸುಲಭವಲ್ಲ. ಕನ್ನಡಿಗರು ನೇಪಾಳದಲ್ಲೂ, ಬಂಗಾಳದಲ್ಲೂ, ಗುಜರಾತಿನಲ್ಲೂ ರಾಜ್ಯಗಳನ್ನು ಆಳಿದ್ದಾರೆ; ಆದರೆ ಅದು ಅವರ ಮೂಲನೆಲೆಯಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಮಧ್ಯಪ್ರದೇಶದ ಈಶಾನ್ಯದ ಅಂಚಿನಲ್ಲಿ ಕನ್ನಡ ಶಾಸನ, ಅದರಲ್ಲೂ ರಾಜನೊಬ್ಬನ ಪ್ರಶಸ್ತಿ ಶಾಸನ ದೊರೆತಿರುವುದು ಆಶ್ಚರ್ಯ. ಬಹುಷಃ ಇದನ್ನು ಸಮರ್ಥಿಸಿಕೊಳ್ಳಲು ಈ ಕೆಳಕಂಡಂತೆ ಸಮಾಧಾನ ಪಡೆಯಬಹುದು. ಮೂರನೆಯ ಕೃಷ್ಣನ ಸೈನ್ಯದ ಜೊತೆಗೆ ಹೋಗಿದ್ದ ಸೈನಿಕರಲ್ಲಿ ಕೆಲವರು ಯಾವುದೋ ಕಾರಣದಿಂದ ಅಲ್ಲೇ ಉಳಿಯಬೇಕಾದ ಸಂದರ್ಭ ಒದಗಿರಬಹುದು. ಅವರಿಗೆ ತಿಳಿದಿದ್ದ ಭಾಷೆ ಮತ್ತು ಲಿಪಿ ಕನ್ನಡ ಮಾತ್ರ. ಆದ್ದರಿಂದ ತಮ್ಮ ಒಡೆಯನ ಪ್ರಶಸ್ತಿಯನ್ನು ತಮ್ಮ ಜೊತೆಗೆ ಇಟ್ಟುಕೊಂಡಿರುವ ಸಲುವಾಗಿ ಈ ಶಿಲಾಶಾಸನ ಸಿದ್ಧವಾಗಿರಬೇಕು. ಆ ತಂಡದಲ್ಲಿ ಒಬ್ಬ ಕವಿಯೂ ಇದ್ದಿರಬಹುದಾದ ಸಾಧ್ಯತೆ ಇರುವುದರಿಂದ ಪ್ರಶಸ್ತಿಯು ಸಹಜವಾಗಿ ಕಾವ್ಯಶೈಲಿಯಲ್ಲಿ ರಚನೆಗೊಂಡಿರುವ ಸಾಧ್ಯತೆಗಳಿವೆ. ಯಾವ ಕಾರಣದಿಂದ ಅಲ್ಲಿ ಶಾಸನ ಸಿದ್ಧವಾಯಿತೋ ಅಥವಾ ಉಳಿಯಿತೋ ಎಂಬ ಕಾರಣದ ಬಗ್ಗೆ ಚರ್ಚಿಸುವುದರ ಬದಲು ಶಾಸನದಲ್ಲಿನ ಸಾಂಸ್ಕೃತಿಕ ವಿಚಾರಗಳನ್ನು ಹೆಮ್ಮೆಯಿಂದ ಮೆಲುಕುಹಾಕುವುದು ಒಳಿತು.
ಮೂರನೆಯ ಕೃಷ್ಣನನ್ನು ನಲ್ಲರಮರುಳ’, ‘ಆನೆವೆಡಂಗ’, ‘ಪರಾಂಗನಾಪುತ್ರ’, ‘ಕಚ್ಚೆಗ’, ಎಂದು ವರ್ಣಿಸುವ ಶಾಸನವು, ಅಷ್ಟು ದೂರದಲ್ಲಿಯೂ, ಕನ್ನಡಿಗರ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಕಂದಪದ್ಯಗಳೂ ಇರುವ ಶಾಸನ ಪಾಠದಲ್ಲಿ ಕಚ್ಚೆಗಎಂಬ ಶಬ್ದವು ಕಂಚಿಯನ್ನು ಗೆದ್ದವನು ಎಂಬ ಅರ್ಥ ನೀಡಿ ಮೂರನೆಯ ಕೃಷ್ಣನ ರಾಜಕೀಯ ಪ್ರಾಬಲ್ಯವನ್ನು ಸ್ಪಷ್ಟಪಡಿಸುತ್ತದೆ. ಸೋಲದೆ ಪರವನಿತೆಗೆ ಕಣ್ಸೋಲದು | ಮೊಲೆವಾಲನೂಡಿ ನಡಪಿದ ತಾಯಿಂ || ಮೇಲೆನೆ ಬಗೆಗುಂ ನೋಡಿರೆ | ಸೋಲದು ಚಿತ್ತಂ ಪರಾಂಗನಾ ಪುತ್ರಕನ || ಎಂಬ ಕಂದಪದ್ಯದಲ್ಲಿ ಕೃಷ್ಣನಿಗೆ ಪರವನಿತೆಯರನ್ನು ಕಂಡಾಗ ಅವನ ಕಣ್ಣು ಕೂಡಾ ಸೋಲುತ್ತಿರಲಿಲ್ಲ ಮತ್ತು ಅಂತಹ ಸಂದರ್ಭದಲ್ಲಿ ಅವನಿಗೆ ಆಕೆಯು ಮೋಲೆಹಾಲನ್ನು ಕೊಟ್ಟು ಸಾಕಿದ ತಾಯಿಗಿಂತ ಹೆಚ್ಚು ಎಂಬ ಭಾವ ಇರುತ್ತಿತ್ತು ಎಂಬ ಮಾತು ಕೃಷ್ಣನ ದೊಡ್ಡತನವನ್ನು ದಾಖಲಿಸಿದೆ. ಅಷ್ಟೇ ಅಲ್ಲದೆ, ಪರವಧುವನ್ನು ಕಂಡಾಗ ಕೃಷ್ಣನಿಗೆ ನೋಡಿರೆ ಪರವಧುಗೆ ಮನಂ ಕೂಡದು, ಸೂೞ್ಸೊೞೊಳೆತ್ತಿ ನಡಪಿದ ತೋಳುಣ್ಡಾಡಿದ ಮೊಲೆ, ಬಸಿಱೊಳಗಿೞ್ದಾಡಿದ ಚಿತ್ತಂ ಪರಾಂಗನಾ ಪುತ್ರಕನ ಎಂಬ ಮಾತುಗಳಲ್ಲಿ ಕೃಷ್ಣನ ವ್ಯಕ್ತಿತ್ವ ಮತ್ತಷ್ಟು ಆಪ್ತವಾಗುತ್ತದೆ. ಕೃಷ್ಣನಿಗೆ ಪರವಧುವನ್ನು ಕಂಡಾಗ ಮನಸ್ಸೂ ಕೂಡುತ್ತಿರಲಿಲ್ಲ. ಬದಲಿಗೆ ಎತ್ತಿ ನಡೆಸಿದ ತೋಳು, ಉಂಡು ಆಡಿದ ಮೊಲೆ ಮತ್ತು ತಾಯಿಯ ಬಸಿರಿನಲ್ಲಿ ಇದ್ದಾಗ ಆಡಿದ ನೆನಪಾಗುತ್ತಿತ್ತಂತೆ. ಇಂತಹ ಒಬ್ಬ ದೊರೆಯ ಪ್ರತಿನಿಧಿಗಳು ನಾವು ಎಂದು ಹೇಳಿಕೊಳ್ಳಲು ಯಾರಿಗೆ ತಾನೆ ಹೆಮ್ಮೆಯಾಗುವುದಿಲ್ಲ. ಈ ಪ್ರಶಸ್ತಿ ಶಾಸನವನ್ನು ಬರೆಯಿಸಿದ ಉಬ್ಬಿಕಾಮೈ ಸೆಟ್ಟಿಯ ತಮ್ಮ ತುಯ್ಯಲ ಚಂದಯ್ಯ ಮತ್ತು ಬರೆದ ಏಚಿಮಯ್ಯ ಅಥವಾ ಚಿಮ್ಮಯ್ಯ ಇಬ್ಬರೂ ಅಲ್ಲೇ ಉಳಿದು, ಈ ಶಾಸನವನ್ನು ದಾಖಲಿಸಿದ್ದಾರೆ ಎಂದು ಊಹಿಸಲು ಅವಕಾಶಗಳಿವೆ. 
ಜುರ ಶಾಸನದ ಪಾಠ
೧.      ಸ್ವಸ್ತಿಶ್ರೀಪರಮಭಟ್ಟಾರ
೨.      ಕ ಪರಮೇಶ್ವರ ಶ್ರೀ ಪೃ
೩.      ಥ್ವೀವಲ್ಲಭಮಹಾರಾಜಾಧಿ
೪.      ರಾಜ ನಲ್ಲರಮರುಳನಾ
೫.      ನೆವೆಡಂಗಂ ಚಲಕೆನಲ್ಲಾ
೬.      ತಂ ವೈರಿವಿಳಾಸಂ ಮದಗ
೭.      ಜಮಲ್ದಂ ಪರಾಂಗನಾಪು
೮.      ತ್ರಂ ಗಣ್ಡ ಮಾರ್ತ್ತಣ್ಡನಕಾಳವ
೯.      ರಿಷಂ ನೃಪತುಂಗಂ ಕಚ್ಚೆಗಂ ಶ್ರೀ
೧೦.    ಮತ್ಕನ್ನರದೇವಂ || ಕನ್ದ ||
೧೧.    . ವನಿತೆಯರ್ಕ್ಕ
೧೨.    .ಗಳುಂ ಬಮ
೧೩.    .ಕಣ್ಣುಂ ನೋಡ
೧೪.    ದು ಕಣ್ನುಡಿಯದು ಬಾಯ್ಕೂ
೧೫.    ಡದು ಚಿತ್ತಂ ಪರಾಂಗನಾ
೧೬.    ಪುತ್ರಕನ || || ಭಾರತ
೧೭.    ದೊಳಿಱದನಿನ್ದ್ರನೊಳೋರಾ
೧೮.    ಸನ ಜಾಣನೆನಿಪ ಪಾ
೧೯.    ಣ್ಡ್ಯನ ಕುಲಮಂ ಬೇರಿನ್ದೆ
೨೦.    ಕಿೞ್ತ ಚೋಳನ ಬೇರಂ
೨೧.    ಬೇರಿನ್ದೆ ಕಿೞ್ತನಾನೆವೆ
೨೨.    ಡಙ್ಗಂ || || ಸೋಲದೆ ಪರವ
೨೩.    ನಿತೆಗೆ ಕಣ್ಸೋಲದು ಮೊ
೨೪.    ಲೆವಾಲನೂಡಿ ನಡಪಿದ
೨೫.    ತಾಯಿಂ ಮೇಲೆನೆ ಬಗೆಗುಂ
೨೬.    ನೋಡಿರೆ ಸೋಲದು ಚಿತ್ತಂ
೨೭.    ಪರಂಗನಾ ಪುತ್ರಕನ || ||
೨೮.    ನೋಡಿರೆ ಪರವಧುಗೆ
೨೯.    ಮನಂಕೂಡದು ಸೂೞ್ಸೂ
೩೦.    ೞೊಳೆತ್ತಿ ನಡಪಿದ
೩೧.    ತೋಳುಣ್ಡಾಡಿದ ಮೊಲೆ ಬ
೩೨.    ಸಿಱೊಳಗಿೞ್ಡಾಡಿದ ಚಿತ್ತಂ
೩೩.    ಪರಾಂಗನಾಪುತ್ರಕನ || ||
೩೪.    ಸ್ವಸ್ತಿ || ಉಬ್ಬಿಕಾಮೈಸೆಟ್ಟಿಯ
೩೫.    ತಮ್ಮಂ ತುಯ್ಯಲ ಚನ್ದ
೩೬.    ಯ್ಯಂ ಪ್ರಶಸ್ತಿಯಂ ಬರೆಯಿಸಿ
೩೭.    ದಂ || ಬರೆದನೆಚಿಮ್ಮಯ್ಯಂ ||

ಶಾಸನದ ಭಾವಾರ್ಥ:
ಶುಭವಾಗಲಿ. ಪರಮಭಟ್ಟಾರಕನಾದ, ಭೂಮಿಗೆ ಒಡೆಯನಾದ, ಮಹಾರಾಜರಿಗೆ ರಾಜನಾದ, ಒಳ್ಳೆಯವರಿಗೆ ಹುಚ್ಚು ಹಿಡಿಸುವ, ಆನೆಗಳೊಡನೆ ಆಡುವ, ದೃಢಮನಸ್ಕನಾದ, ಶತ್ರುಗಳೊಡನೆ ಆಟವಾಡುವ, ಮದಿಸಿದ ಆನೆಗಳೊಡನೆ ಹೋರಾಡುವ, ಪರಸ್ತ್ರೀಯರಿಗೆ ಮಗನಾದ, ವೀರರಿಗೆ ವೀರನಾದ, ಅಕಾಲವರ್ಷನಾದ, ನೃಪತುಂಗ ಶ್ರೀಮತ್ಕನ್ನರದೇವನು ಕಂಚಿಯನ್ನು ಗೆದ್ದವನಾಗಿದ್ದಾನೆ.
ಬೇರೆ ಹೆಣ್ಣುಗಳನ್ನು ಕೆಟ್ಟ ರೀತಿಯಲ್ಲಿ ನೋಡುವುದಿಲ್ಲ. ಅವರ ಬಗ್ಗೆ ಯಾವುದೇ ಕೆಟ್ಟ ಮಾತನ್ನಾಡುವುದಿಲ್ಲ. ಈ ಪರಸ್ತ್ರೀಯರ ಮಗನ ಮನಸ್ಸು ಕೂಡಾ ಪರಸ್ತ್ರೀಯರನ್ನು ಕೂಡುವುದಿಲ್ಲ. ಮಹಾಭಾರತದಲ್ಲಿ ಹೋರಾಡಿ ಇಂದ್ರ್ರನೊಡನೆ ಒಂದೇ ಸಿಂಹಾಸನವನ್ನು ಹಂಚಿಕೊಂಡು ಜಾಣನಾದ ಪಾಣ್ಡ್ಯನ ಬೇರನ್ನು ಕಿತ್ತ ಚೋಳನ ಬೇರನ್ನು ಕಿತ್ತವನು ಈ ಆನೆವೆಡಂಗ.
ಪರವನಿತೆಗೆ ಕಣ್ಣೂ ಸೋಲುವುದಿಲ್ಲ. ಅವರನ್ನು ಕಂಡಾಗ, ಅವರು ಮೊಲೆಹಾಲನ್ನು ಕೊಟ್ಟು ಸಲಹಿದ ತಾಯಿಗಿಂತಲೂ ಮೇಲು ಎಂದು ಭಾವಿಸುತ್ತಿದ್ದ.

ಈ ಪರಾಂಗನಾಪುತ್ರಕನಿಗೆ, ಪರವಧುವನ್ನು ನೋಡಿದಾಗ, ತನ್ನನ್ನು ಎತ್ತಿ ಆಡಿಸಿದ ತಾಯಿಯ ತೋಳು, ಅವಳ ಮೊಲೆಹಾಲನ್ನು ಕುಡಿಯುವಾಗ ಮೊಲೆಯೊಡನೆ ಆಡಿದ ಆಟ, ಬಸಿರಿನಲ್ಲಿದ್ದಾಗ ಆಡಿದ ಆಟ ನೆನಪಾಗುತ್ತಿತ್ತು. ಈ ಪ್ರಶಸ್ತಿಯನ್ನು ಬರೆಯಿಸಿದವನು ಉಬ್ಬಿಕಾಮೈಸೆಟ್ಟಿಯ ತಮ್ಮ ತುಯ್ಯಲ ಚಂದಯ್ಯ. ಬರದವನು ಚಿಮ್ಮಯ್ಯ. (ಏಚಿಮ್ಮಯ್ಯ).

ಶುಕ್ರವಾರ, ಅಕ್ಟೋಬರ್ 14, 2011

ಕನ್ನಡ ಸಾಹಿತ್ಯದಲ್ಲಿನ ಸಂಧಿಕಾಲ

ಮುಮ್ಮಡಿ ಕೃಷ್ಣರಾಜ ಒಡೆಯರ್:
·         ಚಿಕ್ಕದೇವರಾಜ ಒಡೆಯರ್ ಅವರ ನಂತರ ವಿದ್ವತ್ಕವಿಪೋಷಕರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅನೇಕ ವಿದ್ವಾಂಸರಿಗೆ ಆಶ್ರಯದಾತರಾಗಿದ್ದರು.
·         ಶ್ರೀಕೃಷ್ಣರಾಜ ವಾಣೀವಿಲಾಸ ಭಾರತ, ಶಾಕುಂತಲ ನಾಟಕದ ನವೀನಟೀಕೆ ಮೊದಲಾದ ಹಲವು ಗದ್ಯಗ್ರಂಥಗಳನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ರಚಿಸಿದ್ದಾರೆ.
ಕೆಂಪುನಾರಾಯಣ:
·         ಈತ ಮುದ್ರಾಮಂಜೂಷ ಎಂಬ ಉತ್ತಮ ಗದ್ಯಗ್ರಂಥವನ್ನು ರಚಿಸಿದನು.
·         ಈ ಗ್ರಂಥವು ಚಾಣಕ್ಯನು ನಂದರ ವಿನಾಶವನ್ನುಂಟುಮಾಡಿದ ಕಥೆಯನ್ನೂ, ಆನಂತರದ ಬೆಳವಣಿಗೆಗಳ ಕಥೆಯನ್ನೂ ಆಮೂಲಾಗ್ರವಾಗಿ ತಿಳಿಸುತ್ತದೆ.
ಚಾಮರಾಜ ಒಡೆಯರ್ ಅವರ ಕಾಲದಲ್ಲಿ ಅನೇಕ ಸಂಸ್ಕೃತ ನಾಟಕಗಳು ಕನ್ನಡಕ್ಕೆ ತರ್ಜುಮೆಯಾದವು.
·         ಅಭಿನವ ಕಾಳಿದಾಸ ಎಂದೇ ಖ್ಯಾತರಾದ ಬಸವಪ್ಪಶಾಸ್ತ್ರಿಯವರು ತಮ್ಮ ಶಾಕುಂತಲ ಮೊದಲಾದ ನಾಟಕಗಳನ್ನೂ, ದಮಯಂತೀ ಸ್ವಯಂವರ ಮುಂತಾದ ಕಾವ್ಯಗಳನ್ನು ಬರೆದದ್ದು ಚಾಮರಾಜ ಒಡೆಯರ್ ಅವರ ಕಾಲದಲ್ಲಿಯೇ.
ಮುದ್ದಣ:
·         19ನೆಯ ಶತಮಾನದ ಕೊನೆಯಲ್ಲಿ ಗ್ರಂಥರಚನೆ ಮಾಡಿದ ಮುದ್ದಣನ ನಿಜವಾದ ಹೆಸರು ನಂದಳಿಕೆ ಲಕ್ಷ್ಮೀನಾರಾಯಣಪ್ಪ.
·         ಈತ ಹಳಗನ್ನಡ ಗದ್ಯದಲ್ಲಿ ಬರೆದ ರಾಮಾಶ್ವಮೇಧದ ಹಾಸ್ಯಭರಿತ ಸಂಭಾಷಣೆಗಳು ಕನ್ನಡಿಗರಿಗೆ ಅಚ್ಚುಮೆಚ್ಚು.
·         ಮುದ್ದಣನು ಅದ್ಭುತ ರಾಮಾಯಣ, ರಾಮಪಟ್ಟಾಭಿಷೇಕಗಳನ್ನೂ ಹಾಗೂ ಕೆಲವು ಯಕ್ಷಗಾನ ಪ್ರಸಂಗಗಳನ್ನೂ ರಚಿಸಿರುವುದಾಗಿ ತಿಳಿದಿದೆ.
ಜನಪದ ಸಾಹಿತ್ಯ:
·         ಶ್ರೀಮಂತ ಜನಪದದಲ್ಲಿನ ಪದ್ಯಗಳು ಬಾಯಿಂದ ಬಾಯಿಗೆ ಹರಿದಿವೆ.
·         ಅನೇಕ ಲಾವಣಿಗಳು ಪ್ರಚಾರದಲ್ಲಿವೆ.
·         ವೀರತ್ವದ ಟಿಪ್ಪುಸುಲ್ತಾನ್ ಲಾವಣಿ, ಸರ್ಜಪ್ಪನಾಯಕನ ಲಾವಣಿ, ಹಲಗಲಿಯ ಬೇಡರ ಲಾವಣಿಗಳು ಪ್ರಸಿದ್ಧವಾಗಿವೆ.
·         ಜನಪದ ಕಥೆಗಳು ರೋಮಾಂಚಕವಾಗಿರುತ್ತವೆ.
·         ಸಾಮಾಜಿಕ ಜೀವನದ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಸಫಲವಾಗುತ್ತವೆ.
·         ಜನಪದರ ಹಾಡುಗಳಂತೂ ನಿಜಕ್ಕೂ ಜನಜೀವನದ ಅವಿಭಾಜ್ಯ ಅಂಗವೇ ಆಗಿವೆ.
ಸರ್ವಜ್ಞ:
·         ಈತನ ತ್ರಿಪದಿಗಳು ಪ್ರಸಿದ್ಧವಾಗಿವೆ.
·         ಈತ ಬಹುತೇಕ ಆಶುಕವಿಯೇ ಇದ್ದಿರಬೇಕು.
·         ಈತ ಕನ್ನಡ ನಾಡನ್ನೆಲ್ಲಾ ಸಂಚರಿಸಿದಂತೆ ಇವನ ಪದ್ಯಗಳಿಂದ ತಿಳಿಯುತ್ತದೆ.
·         ಈತ ಶೈವಧರ್ಮದ ಹಲವು ಸಿದ್ಧಾಂತಗಳನ್ನೂ ಲೌಕಿಕ ನೀತಿಗಳನ್ನೂ ಉಪದೇಶಿಸುತ್ತಾನೆ.
·         ಈತ ಸಮಾಜದ ಕುಂದುಕೊರತೆಗಳನ್ನು ಎತ್ತಿ ತೋರಿಸುತ್ತಾನೆ.
·         ಸರ್ವಜ್ಞ ಹಾಸ್ಯಪ್ರಿಯ; ಈತನದು ನಕ್ಕು ನಗಿಸುವ ಗುಣ.